ರೋಧನ

ಪಾಂಚಲೀ,
ತಡೆಯಲಿಲ್ಯಾಕೆ ನನ್ನ 
ಈ ಕ್ರೂರ ಯುದ್ಧ ಮಾಡದಂತೆ?

ಬೇಕಿರಲಿಲ್ಲ ನಮಗೀ ರಾಜ್ಯ 

ಹೋಗಲಾರೆ ರಸ್ತೆಯಲಿ 
ರುಂಡ ಮುಂಡ ಕೈ ಕಾಲುಗಳು 
ಕೂಗುತ್ತಿವೆ 
ಮಹಾರಾಜ ಎಲ್ಲಿ ನಮ್ಮ ಪ್ರಾಣ 

ಕೂರಲಾರೆ ಸಿಂಹಾಸನದಲಿ 
ಮುತ್ತಜ್ಜನ ಶಯ್ಯೆಯ ಬಾಣಗಳು ಚುಚ್ಚುತ್ತಿವೆ 


 ಯಾರೋ ಅಳುತ್ತಿದ್ದಾರೆ 
ಅಮ್ಮ ನೋವೂ 

ತುತ್ತು ಅನ್ನ ಉಣಲಾರೆ 
ಅಪ್ಪ ನನಗೂ ಎನ್ನುವ ಮಕ್ಕಳು 
ಎಲ್ಲಿ ಎಲ್ಲಿ ?
ಬರೀ ಭ್ರಮೆ 

ಭೀಮಾರ್ಜುನರ ಬಳಿ ಹೋಗಲಾರೆ 
ಅವರ ದೀನ ನಿಶ್ಶಬ್ದ ಅಳಲು 
ನಮ್ಮ ಮಕ್ಕಳೆಲ್ಲಿ ಅಣ್ಣಾ 

ಹದಿನೆಂಟು ಅಕ್ಷೋಹಿಣಿ ನಿಷ್ಪಾಪಿಗಳ 
ಹತ್ಯೆಯ ಪಾಪ 
ತೊಳೆಯಲಿ ಯಾವ ಗಂಗೆಯಲಿ ?

ನೀನ್ಯಾಕೆ ತಡೆಯಲಿಲ್ಲವೇ 
ಪಾಂಚಾಲಿ 
ಈ ಕ್ರೂರ ನರಹತ್ಯೆಯ ?

Comments

Popular posts from this blog

ಎಮ್ಮೆ

ಸೇಲ್

ಹೂಗಳು