ಈ ಕೊರೊನ ರೋಗ ನಮ್ಮನ್ನೆಲ್ಲ ಸಂಪೂರ್ಣವಾಗಿ ನಿರಾಯುಧರನ್ನಾಗಿಸಿದೆ. ಅದರ ಭಯದಿಂದ ನಾವು ಮನೆಯಿಂದ ಹೊರ ಹೋಗುವದಿರಲಿ, ಗಟ್ಟಿಯಾಗಿ ಉಸಿರಾಡಲು ಭಯ ಪಡುತ್ತಿದ್ದೇವೆ.

ನಮ್ಮ ಸರಕಾರವೂ ರೋಗದ ಹಬ್ಬುವಿಕೆಯನ್ನು ನಿಯಂತ್ರಿಸಲು ಬಹಳಷ್ಟು ಪ್ರಯತ್ನ ಮಾಡುತ್ತಿದೆ. ನಮ್ಮನ್ನೆಲ್ಲ ಮನೆಯಲ್ಲೇ ಇರಲು ತಾಕೀತು ಮಾಡಿದೆ. ಆವಶ್ಯಕ ವಸ್ತುಗಳು ಎಲ್ಲರಿಗೂ ಸಿಗಲು ವ್ಯವಸ್ಥೆ ಮಾಡುತ್ತಿದೆ.

ಆದರೆ ದಿನವೂ ನಾವು ಓದುತ್ತಿರುವ ಸುದ್ದಿ ಓದಿದರೆ ಭಯವಾಗುತ್ತದೆ

ಇವತ್ತಿನ ಸುದ್ದಿ - ಅವನ ಹೆಸರು ರಣವೀರ್. ದೆಹಲಿಯ ಹೋಟೆಲ್ ಒಂದರಲ್ಲಿ ಡೆಲಿವರಿ ಮಾಡುತ್ತಿದ್ದ. ಹೆಂಡತಿ ಮತ್ತು ಮಕ್ಕಳು ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ, ಅವನು ಕಲಿಸುವ ಹಣದಿಂದ ಹೇಗೋ ಸಂಸಾರ ಸಾಗಿಸುತ್ತಿದ್ದರು.

ಈಗ ಅವನು ಕೆಲಸ ಮಾಡುತ್ತಿರುವ ಹೋಟೆಲ್ ಮುಚ್ಚಿದೆ. ಅವನಿಗೆ ಹೊಟ್ಟೆಗೆ ಆಹಾರವಿಲ್ಲ. ಸಾವಿರಾರು ಅವನಂತಹ ಕೆಲಸಗಾರರಂತೆ ಅವನೂ ಸಹ ಮನೆಗೆ - ಅವನ ಹಳ್ಳಿಗೆ ವಾಪಸ್ ಹೋಗಲು ಆರಂಭಿಸಿದ. ಆದರೆ ಬಸ್, ರೈಲು ಏನು ಇಲ್ಲವಲ್ಲ. ನಡೆಯಲು ಆರಂಭಿಸಿದ. ನೀರು, ಆಹಾರ ಏನೂ ಇಲ್ಲದೆ.

ಮನೆ ಇನ್ನು ನೂರು ಕಿಲೋಮೀಟರು ಇರುವಾಗ ಆಗ್ರಾದಿಂದ ರಣವೀರ ಹೆಂಡತಿಗೆ ಫೋನ್ ಮಾಡಿದಾಗ ಅವನಿಗೆ ಉಸಿರಾಡಲು ಆಗುತ್ತಿಲ್ಲ. ಹೇಗಾದರೂ ಮಾಡಿ ನನ್ನನ್ನು ಕರೆದು ಕೊಂಡು ಹೋಗು ಎಂದು ಹೇಳಿದ್ದಾನೆ. ಅವಳಾದರೂ ಏನು ಮಾಡುತ್ತಾಳೆ? ಎಲ್ಲಿಂದ ವಾಹನ ತರುತ್ತಾಳೆ ?

ಮರು ದಿನ ಬೆಳಿಗ್ಗೆ ರಣವೀರನ ಹೆಂಡತಿ ಅವನಿಗೆ ಫೋನು ಮಾಡಿದರೆ ಅವನಿಗೆ ಮಾತಾಡಲೇ ಆಗುತ್ತಿಲ್ಲ. ಎದೆ  ನೋವು ಎಂದು ಹೇಳಿದ್ದೊಂದು ಗೊತ್ತಾಗುತ್ತಿದೆ. ಅವಳು ಭಯದಿಂದ ನೆಂಟರೆಲ್ಲರ ಸಹಾಯದಿಂದ ವಾಹನ ಹೊಂದಿಸಿ, ಆ ವಾಹನಕ್ಕೆ ಪಾಸ್ ಮಾಡಿಸಿ ಅವನಿರುವ ಆಗ್ರಾಕ್ಕೆ ಹೋದರೆ ಅಲ್ಲಿ ಅವಳು ಕಂಡಿದ್ದು ಆಸ್ಪತ್ರೆಯಲ್ಲಿ ಬಿಳಿ ಬಟ್ಟೆ ಹೊದಿಸಿರುವ ಅವನ ಮೃತ ಶರೀರ.

ಅವನ ಸಾವು ತಡೆಯಬಹುದಿತ್ತ? ಅವನ ಇಬ್ಬರು ಮಕ್ಕಳು - ಚಿಕ್ಕವಳು ಪೋಲಿಯೋ ರೋಗದಿಂದ ನಿಲ್ಲಲು ಆಗದವಳು. ಅವನ ಮಕ್ಕಳು ಅನಾಥರಾಗುವದನ್ನು ತಡೆಯಬಹುದಾಗಿತ್ತ? ಯಾರು? ಮತ್ತು ಹೇಗೆ ?

ನಮ್ಮ ದೇಶದ ಬಹುತೇಕ ರಸ್ತೆಗಳಲ್ಲಿ ಇನ್ನು ಸಾವಿರಾರು ರಣವೀರರು ನೂರಾರು ಕಿಲೋಮೀಟರು ನಡೆದುಕೊಂಡು ತಮ್ಮ ಹಳ್ಳಿಗಳಿಗೆ ಹೋಗುತ್ತಿದ್ದಾರೆ. ಅವರ ಕೈಯಲ್ಲಿ ಹಣವಿಲ್ಲ, ಹೊಟ್ಟೆಗೆ ಆಹಾರವಿಲ್ಲ. ಅವರಿಗಾಗಿ ವಾಹನದ ವ್ಯವಸ್ಥೆ ಮಾಡುವದು ನಮ್ಮ ಕರ್ತವ್ಯವಲ್ಲವೇ. ಈ ಸಂಕಟ ಕಾಲದಲ್ಲಿ ನಮ್ಮ ಜೀವದಷ್ಟೇ  ಅವರ ಜೀವವೂ ಮುಖ್ಯವಲ್ಲವೇ?
 

Comments

Popular posts from this blog

ಹೂಗಳು

ಎಮ್ಮೆ

Not for nation