ವೇದಗಳು ಮತ್ತು ಋಗ್ವೇದ

ಬಹುತೇಕ ಹಿಂದೂಗಳು ವೇದಗಳನ್ನು ಧರ್ಮ ಗ್ರಂಥಗಳೆಂದು ನೋಡುತ್ತಾರೆ. ಇದು ನನಗೆ ಬಹಳ ದುರದೃಷ್ಟಕರ ಎನಿಸುತ್ತದೆ. ಏಕೆಂದರೆ ಹೀಗೆ ನೋಡಿದಾಗ ನಾವು ಅವುಗಳ ನಿಜವಾದ ಮಹತ್ವವನ್ನು ಗಮನಿಸುವದಿಲ್ಲ - ವೇದಗಳು ಆ ಪುರಾತನ ಕಾಲದಲ್ಲಿ, ಆರಂಭಿಕ ಹಂತಗಳಲ್ಲಿ ಮಾನವನ ಸ್ಥಿತಿ-ಗತಿ ಹಾಗೂ ಮನೋವೃತ್ತಿ ಹೇಗಿತ್ತೆಂದು ಹೇಳುತ್ತವೆ. ಆಹಾ, ಅದು ಎಂತಹ ಅದ್ಭುತ ಮನಸ್ಸಾಗಿತ್ತು!

 ವೇದಗಳು (ವಿದ್= ತಿಳಿದುಕೊಳ್ಳುವುದ) ಮೂಲತಃ ಅಂದಿನ ಕಾಲದಲ್ಲಿರುವ ಎಲ್ಲಾ ಜ್ಞಾನದ ಸಂಗ್ರಹಗಳು; ಅವುಗಳಲ್ಲಿ ಹಲವು ವಿಷಯಗಳು ಕಲಸುಮೇಲೋಗರವಾಗಿವೆ: ಸ್ತೋತ್ರಗಳು, ಪ್ರಾರ್ಥನೆಗಳು, ಯಜ್ಞಗಳ ಆಚರಣೆಯ ವಿಧಿಗಳು, ಮಾಟ-ಮಂತ್ರಗಳು ಹಾಗೂ ಪ್ರಕೃತಿಯ ಮೇಲೆ ಅತಿ ಸುಂದರವಾದ ಕಾವ್ಯಗಳು ಇವೆಲ್ಲವುಗಳನ್ನೂ ವೇದಗಳಲ್ಲಿ ನೋಡಬಹುದು. 

ಆಶ್ಚರ್ಯವೆಂದರೆ ವೇದಗಳಲ್ಲಿ ಮೂರ್ತಿ ಪೂಜೆಯ ಪ್ರಸ್ತಾಪವಿಲ್ಲ; ಅಲ್ಲಿಯ ದೇವತೆಗಳಿಗೆ ದೇವಾಲಯಗಳಿಲ್ಲ. ಆದರೆ ಈ ಗ್ರಂಥಗಳಲ್ಲಿ ಆದಮ್ಯ ಜೀವ ಚೈತನ್ಯ ವ್ಯಾಪಿಸಿದೆ.  ವೈದಿಕ ಆರ್ಯರು ಜೀವನದ ಬಗ್ಗೆ  ಅತೀ ಉತ್ಸಾಹ ಹೊಂದಿದ್ದ ಕಾರಣ, ಬಹುಶಃ ಆತ್ಮದ ಬಗ್ಗೆ ಹೆಚ್ಚು ಗಮನ ಹರಿಸಿಲಿಲ್ಲ.  ಆದರೆ ಮರಣದ ನಂತರ ಯಾವುದೋ ಒಂದು ರೀತಿಯ ಅಸ್ತಿತ್ವವಿರಬಹುದೆನೋ ಎಂಬ ಅಸ್ಪಷ್ಟ ಕಲ್ಪನೆಯನ್ನು ಮಾತ್ರ ಹೊಂದಿದ್ದರು.

ಕಾಲ ಕ್ರಮೇಣ ದೇವರ ಪರಿಕಲ್ಪನೆ ಬೆಳೆಯುತ್ತಾ ಹೋಯಿತು: ಮೊದಮೊದಲು ಗ್ರೀಸ್ ದೇಶದಂತೆ ಒಲಿಂಪಿಯನ್ ಪ್ರಕಾರದ ಅನೇಕ ದೇವರುಗಳ ಪೂಜೆ (ಝೂಯಸ್ , ಪಾಸಿಡಾನ್ ಮತ್ತು ಹೇಡಿಸ್ ನ ಹಾಗೆ  ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಶಿವ) ಆರಂಭವಾಯಿತು, ಅದರ ನಂತರ ಏಕ ದೇವೋಪಾಸನೆ ಪ್ರಚಲಿತಕ್ಕೆ ಬಂತು. ಅದರ ನಂತರ ಅದ್ವೈತ ತತ್ವ ಮೂಡಿ ಬಂತು. 

ಕಾಲ ಕ್ರಮೇಣ ದೇವರ ಬಗೆಗಿನ ಚಿಂತನೆಯ ಜೊತೆಗೆ ಅವರು ಪ್ರಕೃತಿಯ ನಿಗೂಢತೆಯ ಬಗ್ಗೆ ಚಿಂತಿಸತೊಡಗಿದರು. ತಾರ್ಕಿಕವಾಗಿ, ತತ್ವಜ್ಞಾನದ ಬಗ್ಗೆ ವಿಚಾರ ಮಾಡತೊಡಗಿದರು. ಇವೆಲ್ಲಾ ಬೆಳವಣಿಗೆಗಳು ಒಂದೆರಡು ವರುಷಗಳಲ್ಲಲ್ಲ - ನೂರಾರು ವರ್ಷಗಳ ಅವಧಿ ತೆಗೆದುಕೊಂಡಿತು. ಮತ್ತು ಅವರು ವೇದದ ಅಂತ್ಯವನ್ನು ತಲುಪುವ ಹೊತ್ತಿಗೆ (ವೇದಾಂತ),  ಉಪನಿಷತ್ತುಗಳು ರಚಿತವಾಗತೊಡಗಿದವು.

ಋಗ್ವೇದ

 ವೇದಗಳಲ್ಲಿ ಮೊದಲನೆಯದಾದ ಋಗ್ವೇದವು ಬಹುಶಃ ನಮ್ಮ ಜಗತ್ತಿನ  ಅತ್ಯಂತ ಪ್ರಾಚೀನ ಪುಸ್ತಕವಾಗಿರಬಹುದು. ಇದರಲ್ಲಿ ನಾವು ಮಾನವ ಮನಸ್ಸಿನ ಮೊದಲ ಅಭಿವ್ಯಕ್ತಿಯನ್ನು, ಕಾವ್ಯದ ಪ್ರಕಾಶವನ್ನು, ಪ್ರಕೃತಿಯ ಸೌಂದರ್ಯ ಮತ್ತು ನಿಗೂಢತೆಯ ಬಗೆಗಿನ ಭಾವಪರವಶತೆಗಳನ್ನು ಕಾಣಬಹುದು.
 
 ಡಾ. ಮ್ಯಾಕ್ನಿಕೋಲ್ ಹೇಳುವಂತೆ, " ಋಗ್ವೇದದ ಈ ಆರಂಭಿಕ ಸ್ತೋತ್ರಗಳಲ್ಲಿ,ಬಹಳ ಹಿಂದಿನ ಕಾಲದಲ್ಲಿಯೇ, ನಮ್ಮ ಪ್ರಪಂಚದ ಮಹತ್ವ ಮತ್ತು ಅದರೊಳಗಿನ ಮನುಷ್ಯನ ಜೀವನದ ಮಹತ್ವವನ್ನು ಅನ್ವೇಷಿಸಬಯಸುವ ಧೈರ್ಯಶಾಲಿಗಳ ಸಾಹಸಗಳ ವಿವರವಿದೆ.... ಇಂದಿಗೂ ಭಾರತವು ಈ ಸಾಹಸದ ಅನ್ವೇಷಣೆಯನ್ನು ನಿಲ್ಲಿಸಿಲ್ಲ."

ಆದರೆ ಋಗ್ವೇದ ಶೂನ್ಯದಿಂದ ಸೃಷ್ಟಿಯಾಗಲಿಲ್ಲ. ಅದರ ಸಾಧನೆಗಳ ಹಿಂದೆ, ಸಿಂಧೂ ಕಣಿವೆ ಮತ್ತು ಮೆಸೊಪಟ್ಯಾಮಿಯಾ ಮತ್ತು ಇತರ ನಾಗರಿಕತೆಗಳ ಸಾಧನೆ ಹಾಗೂ ಚಿಂತನೆಗಳಿವೆ. ಆದ್ದರಿಂದಲೇ, ಋಗ್ವೇದದಲ್ಲಿ  ಸೂಕ್ತ ಸಮರ್ಪಣೆ ಇದೆ: "ನಮ್ಮ ಪೂರ್ವಜರಿಗೆ , ಮೊದಲ ಮಾರ್ಗದರ್ಶಕರಿಗೆ (ಈ ಕೃತಿಯನ್ನು ಸಮರ್ಪಿಸುತ್ತೇವೆ)!"

ಋಗ್ವೇದದ ವೈದಿಕ ಸ್ತೋತ್ರಗಳನ್ನು ರವೀಂದ್ರನಾಥ ಟ್ಯಾಗೋರ್ ಅವರು ಹೀಗೆ ಹೇಳಿದ್ದಾರೆ "ಅಸ್ತಿತ್ವದ ಅದ್ಭುತ ವಿಸ್ಮಯಕ್ಕೆ ಜನರ ಸಾಮೂಹಿಕ ಪ್ರತಿಕ್ರಿಯೆಯ ಕಾವ್ಯಾತ್ಮಕ ಪುರಾವೆ ಇದು. ಆ ಪುರಾತನ ಕಾಲದಲ್ಲೇ, ಅದ್ಭುತ ಮತ್ತು ಸರಳ ಕಲ್ಪನಾಶಕ್ತಿ ಹೊಂದಿರುವ ಜನರು, ಜೀವನದಲ್ಲಿ ಅಂತರ್ಗತವಾಗಿ ಇರುವ ಅಪರಿಮಿತ ನಿಗೂಢತೆಯನ್ನು ನೋಡಿ ಜಾಗೃತರಾದರು. ಅವರು ಸರಳ ನಂಬಿಕೆಯಿಂದ ಪ್ರಕೃತಿಯ ಪ್ರತಿಯೊಂದು ಅಂಶ ಮತ್ತು ಶಕ್ತಿಗೂ ದೈವತ್ವವನ್ನು ಆರೋಪಿಸಿದರು. ಆದರೆ ಅವರ ಆ ನಂಬಿಕೆ ಧೈರ್ಯಶಾಲಿ ಮತ್ತು ಸಂತೋಷಕರವಾಗಿತ್ತು.  ಜಗದ ನಿಗೂಢತೆ ಅವರ ಜೀವನವನ್ನು ವೃದ್ಧಿಸಿತೇ ಹೊರತು, ಅದನ್ನು ಗೊಂದಲಗೊಳಿಸಲಿಲ್ಲ. ಜಗತ್ತಿನ ವಿರೋಧಾಭಾಸಗಳ ವೈವಿಧ್ಯದ ಬಗ್ಗೆ ಬೌದ್ಧಿಕ ಚಿಂತನೆಯ ತೊಳಲಾಟವಿಲ್ಲದ್ದು ಈ ಜನಾಂಗದ ನಂಬಿಕೆ. ಆದರೂ ಒಮ್ಮೊಮ್ಮೆ ಅಂತಪ್ರಜ್ಞೆಯಿಂದ ಅವರಿಗೆ ಅರಿವಾಗಿ ಹೀಗೆ ಹೇಳುತ್ತಿದ್ದರು: “ಏಕಂ ಸತ್ ವಿಪ್ರಾ ಬಹುಧಾ ವದಂತಿ (ದೇವರೊಬ್ಬನೇ, ನಾಮ ಹಲವು)".
 
ಆದರೂ ಕಾಲ ಕ್ರಮೇಣ ಪ್ರಕೃತಿಯ ಬಗ್ಗೆ ಗಾಢ ಚಿಂತನೆ  ಮಾಡತೊಡಗಿದ ಜನ ಹೀಗೆಂದು ಬರೆದರು. (ನಾಸದೀಯ ಸೂಕ್ತ - ಋಗ್ವೇದ) 
  • ಮೊದಲು ಅಸ್ತಿತ್ವವಿರಲಿಲ್ಲ ಅಥವಾ ಅಸ್ತಿತ್ವದಲ್ಲಿಲ್ಲದ ಸ್ಥಿತಿ ಇರಲಿಲ್ಲ: ಗಾಳಿಯಿರಲಿಲ್ಲ, ಅದರಾಚೆಗೆ ಆಕಾಶವಿರಲಿಲ್ಲ. ಎಲ್ಲವನ್ನು ಏನು ಆವರಿಸಿತ್ತು? ಎಲ್ಲಿ ಆವರಿಸಿತ್ತು? ಯಾವುದು ಎಲ್ಲ ವಸ್ತುಗಳಿಗೆ  ಆಶ್ರಯ ನೀಡಿತು? ಅಲ್ಲಿ ನೀರು ಇತ್ತೇ, ಅಗಾಧ ಆಳದ ನೀರು ಇತ್ತೇ?
  •  ಆಗ ಸಾವು ಇರಲಿಲ್ಲ, ಅಮರತ್ವವೂ ಇರಲಿಲ್ಲ: ಹಗಲು ಮತ್ತು ರಾತ್ರಿಯ ವಿಭಾಜಕವಾದ ಯಾವುದೇ ಚಿಹ್ನೆ ಇರಲಿಲ್ಲ. ಆ ಒಂದು ವಸ್ತು, ಉಸಿರಾಡದೆ, ತನ್ನದೇ ಆದ ಸ್ವಭಾವದಿಂದ ಉಸಿರು ಸಿಗುವ ಇತ್ತು: ಅದರ ಹೊರತಾಗಿ ಏನೂ ಇರಲಿಲ್ಲ.
  •  ಕತ್ತಲೆ ಇತ್ತು: ಅದು ಕತ್ತಲೆಯಲ್ಲಿ ಅಡಗಿತ್ತು, ಎಲ್ಲವೂ ವಿವೇಚನೆಯಿಲ್ಲದ ಅವ್ಯವಸ್ಥೆಯಾಗಿತ್ತು. ಇದ್ದದ್ದೆಲ್ಲವೂ ಶೂನ್ಯ ಮತ್ತು ನಿರಾಕಾರವಾಗಿತ್ತು: ಉಷ್ಣತೆಯ ಮಹಾ ಶಕ್ತಿಯಿಂದ ಒಂದು ಘಟಕವು ಜನಿಸಿತು.
  •  ನಂತರ ಬಯಕೆ ಹುಟ್ಟಿಕೊಂಡಿತು, ಚೈತನ್ಯದ ಪ್ರಾಥಮಿಕ ಬೀಜ ಮತ್ತು ಮೊಳಕೆಯ ಬಯಕೆ. ತಮ್ಮ ಹೃದಯದ ಚಿಂತನೆಯಿಂದ ಹುಡುಕಿದ ಋಷಿಗಳು ಅಸ್ತಿತ್ವದಲ್ಲಿಲ್ಲದ ವಸ್ತುವಿನಲ್ಲಿ ಅಸ್ತಿತ್ವದ ರಕ್ತಸಂಬಂಧವನ್ನು ಕಂಡುಕೊಂಡರು.
  • ಬೇರ್ಪಡಿಸುವ ರೇಖೆಯನ್ನು ಅಡ್ಡಲಾಗಿ ವಿಸ್ತರಿಸಲಾಯಿತು: ಆಗ ಅದರ ಮೇಲೆ ಏನಿತ್ತು, ಮತ್ತು ಅದರ ಕೆಳಗೆ ಏನು. ಜನ್ಮದಾತರು ಇದ್ದರು, ಪ್ರಬಲ ಶಕ್ತಿಗಳು ಇದ್ದವು, ಇಲ್ಲಿ ಮುಕ್ತ ಕ್ರಿಯೆ ಮತ್ತು ಶಕ್ತಿ ಇತ್ತು.
  •  ಯಾರಿಗೆ ನಿಜ ತಿಳಿದಿದೆ ಮತ್ತು ಯಾರು ಘೋಷಿಸಬಹುದು? ಈ ಸೃಷ್ಟಿ ಎಲ್ಲಿಂದ ಹುಟ್ಟಿತು ಮತ್ತು ಎಲ್ಲಿಂದ ಬಂತು?
    ದೇವರುಗಳು ಈ ಪ್ರಪಂಚದ  ನಂತರ ಬಂದವರು. ಹಾಗಾದರೆ ಅದು ಮೊದಲು ಎಲ್ಲಿಂದ ಅಸ್ತಿತ್ವಕ್ಕೆ ಬಂದಿತು? ಯಾರಿಗೆ ತಿಳಿದಿದೆ?
  •  ಈ ಸೃಷ್ಟಿಯ ಮೊದಲ ಮೂಲವಾದವನು  ಎಲ್ಲವನ್ನೂ ಸೃಷ್ಟಿಸಿದನೋ ಅಥವಾ ಇಲ್ಲವೋ?
    ಈ ಲೋಕವನ್ನು ಯಾರ ಕಣ್ಣು ಸ್ವರ್ಗದಲ್ಲಿ ನಿಯಂತ್ರಿಸುತ್ತದೆಯೋ, ಅವನಿಗೆ ಎಲ್ಲವೂ ತಿಳಿದಿದೆ, ಅಥವಾ ಬಹುಶಃ ತಿಳಿದಿಲ್ಲದಿರಬಹುದು.

 

Comments

Popular posts from this blog

ಎಮ್ಮೆ

ಸೇಲ್

ಹೂಗಳು